ತಾನಿನ್ನು ಮನೆ ಸೇರುವುದು ಕನಸಿನ ಮಾತು ಎಂದುಕೊಂಡನವನು. ನಿಸ್ಸಹಾಯಕನಾಗಿ ಜಡಿಮಳೆಯ ನಡುವೆಯೂ ತನ್ನ ಮನೆಯವರಿಗಾಗಿ, ತನ್ನವರಿಗಾಗಿ ಕಾಣದ ಶಕ್ತಿಯಲ್ಲಿ ಮೊರೆಯಿಟ್ಟನು. ಪ್ರಕೃತಿಯೆದುರು ಮಾನವ ತೃಣ ಸಮಾನ ಎಂಬ ಮಾತು ಅದೆಷ್ಟು ಸತ್ಯ! ಎನ್ನಿಸಿತವನಿಗೆ. ಪ್ರಕೃತಿಯನ್ನು ದೇವಿ ಎಂದು ಪೂಜಿಸುವ ಕುಲ ಅವನದು. ಅಂತಹ ಮಾತೆಯೊಡಲಲ್ಲಿ ಕಣ್ಮುಚ್ಚಿದರೂ ಅದು ಭಾಗ್ಯ ಎನ್ನುವ ಧೋರಣೆ ಅವನದು. ಇದೇ ಕಡಲಿನ ಶಾಂತ ಸ್ವರೂಪವನ್ನೂ ಅವನು ಚೆನ್ನಾಗಿ ಬಲ್ಲನು. ಅದೆಷ್ಟು ಬಾರಿ ಈ ಕಡಲು ಅವನ ಹೊಟ್ಟೆಗೆ ಹಿಟ್ಟಿನ ದಾರಿ ನೀಡಿಲ್ಲ! ಅದೆಷ್ಟು ಬಾರಿ ಅವನ ಅದೆಷ್ಟೋ ದುಗುಡಗಳನ್ನು ಕಡಲತಡಿಯ ತಣ್ಣನೆಯ ಗಾಳಿ ತಣಿಸಿಲ್ಲ! ಅದೆಷ್ಟು ನಿದ್ರೆಯಿರದ ರಾತ್ರಿಗಳನ್ನು ಅವನು ಅದೇ ಕಡಲತಡಿಯ ಮರಳ ಮೇಲೆ ಕಳೆದಿಲ್ಲ! ಕದಡಿದ, ಭಾರವಾದ ಮನ ಹೊತ್ತು ಆ ತುದಿಯ ಹೆಬ್ಬಂಡೆಯ ಮೇಲೆ ಕುಳಿತು ಮೌನವಾಗಿ ಕಡಲ ಶಾಂತ ಅಲೆಗಳ ಹೊಯ್ದಾಟವನ್ನು ನೋಡನೋಡುತ್ತಾ ಆತ್ಮ ಮಂಥನ ನಡೆಸಿದ ದಿನಗಳೆಷ್ಟೋ! ಒಟ್ಟಿನಲ್ಲಿ ಕಡಲು ಅವನ ಜೀವ, ಜೀವನವೇ ಆಗಿತ್ತು. ಒಂದು ವೇಳೆ ತಾನು ಇಂತಹ ಮಾತೃ ಸಮಾನವಾದ ಕಡಲ ಒಡಲಲ್ಲಿ ಹೇಳಹೆಸರಿಲ್ಲದೆ ಗತಿಸಿದರೂ ಅದು ತನ್ನ ಪಾಲಿನ ಭಾಗ್ಯವೆಂದೇ ಅವನ ಭಾವ. ಕಣ್ಮುಚ್ಚಿ ಕೈಮುಗಿದು ನಿಂತನವನು ತನ್ನ ಸಾವನ್ನು ಸ್ವಾಗತಿಸಲೇನೋ ಎಂಬಂತೆ! #ಧ್ರುವತಾರೆ-೩ #ಸಣ್ಣಕಥೆ #ಹಾಗೆ_ಸುಮ್ಮನೆ #ಅರೆಘಳಿಗೆ_ಹೊಳೆದ_ಸಾಲುಗಳು #yqjogi #yqkannada #ಕನ್ನಡ_ಪ್ರೀತಿ